ಮೂಲಸ್ಥಾನ ಶ್ರೀಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಾಘ ಮಾಸದ ಅಮಾವಾಸ್ಯೆ ವಿಶೇಷ ಪೂಜೆ
ಅರಸೀಕೆರೆ: ತಾಲೂಕಿನ ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಾಘಮಾಸದ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿಅಮ್ಮನವರಿಗೆ ವಿಶೇಷ ಪೂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಪ್ರತಿ ತಿಂಗಳು ಅಮಾವಾಸ್ಯೆಯಂದು ಕೋಡಿಮಠ ಜಗದ್ಗುರುಗಳ ಸಂಕಲ್ಪದಂತೆ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳುವ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ ವಿಧಾ ನಗಳಿಂದ ಜರುಗಿತು.
ಪೂಜೆಯ ಅಂಗವಾಗಿ ದೇವಾಲಯವನ್ನು ಮಾವಿನ ತಳಿರು ತೋರಣ ಹಾಗೂ ಬಾಳೆಕಂದು ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಭಕ್ತರ ಕಣ್ಮನ ಸೆಳೆಯಿತು.
8 ಗಂಟೆಗೆ ಸರಿಯಾಗಿ ಪುರೋಹಿತರಿಂದ ಕೋಡಿಮಠದ ಶ್ರೀ ಶಿವಲಿಂಗಜ್ಜಯ್ಯ ಮೂರ್ತಿಗೆ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರುಚನ್ನಬಸವೇಶ್ವರಸ್ವಾಮಿ ಮತ್ತು ಅಮ್ಮನವರಿಗೆ ಕರ್ಪೂರದಾರತಿ ಹಾಗೂ ಮಹಾಮಂಗಳಾರತಿ ಸಲ್ಲಿಸಲಾಯಿತು.
ಬಂದ ಭಕ್ತಾದಿಗಳಿಗೆ ಶಶಿವಾಳ ಗ್ರಾಮದ ಲೇಟ್ ಶ್ರೀಮತಿ ರಾಮಕ್ಕ ಸಿದ್ದಪ್ಪ ಮತ್ತು ಮಕ್ಕಳು, ಮೊಮ್ಮಕ್ಕಳು ಬುರ್ಜಿ ಮನೆ ಇವರ ವತಿಯಿಂದ ದಾಸೋಹ ವ್ಯವಸ್ಥೆಯನ್ನು ಕಲ್ಪಿಸ ಲಾಗಿತ್ತು.ಮಾಡಾಳು,ಕೊಪ್ಪಲು,ಸೀತಾಪುರ, ಯರೆಹಳ್ಳಿ,ಡಿ ಎಂ ಕುರ್ಕೆ,ಶಶಿವಾಳ,ರಾಂಪುರ, ಪಿ ಹೊಸಳ್ಳಿ, ವೈ ಜಿ ಹಳ್ಳಿ, ಕಿತ್ತನಕೆರೆ,ದೋಣನಕಟ್ಟೆ, ಬೊಮ್ಮಸಮುದ್ರ, ಕೆ ಶಂಕರನಹಳ್ಳಿ,ಕಡಲಮಗ್ಗೆ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾ ದರು.
