ಹುಡಾ ಅಧ್ಯಕ್ಷ ಸ್ಥಾನ ಪಟೇಲ್ ಶಿವಪ್ಪ ಅವರಿಗೆ ನೀಡುವಂತೆ ಒತ್ತಾಯ
ಅರಸೀಕೆರೆ: ಹಾಸನದ ಹುಡಾ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದದವರಿಗೆ ನೀಡುವ ನಿಟ್ಟಿನಲ್ಲಿ ಸರಕಾರ ಮುಂದಾಗಿದ್ದು ಇದನ್ನು ಅಲ್ಪಸಂಖ್ಯಾತರ ಸಮಾಜ ಸ್ವಾಗತಿಸುತ್ತದೆ ಎಂದು ನಗರಸಭೆ ಮಾಜಿ ಸದಸ್ಯ ಯೂನಸ್ ಹೇಳಿದರು.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಹಾಸನ ಜಿಲ್ಲೆಯ ಕೆಲವು ಮುಖಂಡರು ಅಲ್ಪಸಂಖ್ಯಾತ ಸಮಾಜಕ್ಕೆ ಮುಜುಗರ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೂ ಅಲ್ಲದವರಿಂದ ಪ್ರತಿಭಟನೆ ಮಾಡಿಸಿ. ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ತರಲು ಇಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಸರಿಯಲ್ಲ. ಸೈಯದ್ ತಾಜಿಂ ಈ ಹಿಂದೆ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಯಾರ ಪರವಾಗಿ ಕೆಲಸ ಮಾಡಿದ್ದರು ಎಂಬುದನ್ನು ಇವರಿಗೆ ಬೆಂಬಲ ನೀಡಿ ಕೆಲಸ ಮಾಡುತ್ತಿರುವವರು ಹೇಳಲಿ ಎಂದು ಹೇಳಿದರು.
ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಿಂದುಳಿದ ವರ್ಗಕ್ಕೆ ನೀಡಲು ಮುಂದಾಗಿರುವುದನ್ನು ಎಲ್ಲರೂ ಸ್ವಾಗತಿಸಿದ್ದೇವೆ. ಅದಕ್ಕೆ ಅಲ್ಪಸಂಖ್ಯಾತರ ಸಮಾಜದ ಒಪ್ಪಿಗೆ ಸಹ ಇದೆ. ಕುರುಬ ಸಮಾಜದ ಮುಖಂಡ, ಹಿರಿಯ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಪಟೇಲ್ ಶಿವಪ್ಪನವರ ಹೆಸರು ಕೇಳಿ ಬರುತ್ತಿದ್ದು, ಇವರಿಗೆ ನೀಡಿದರೇ ಅರಸೀಕೆರೆ ತಾಲೂಕಿಗೆ ನೀಡಿದ ಹಾಗೂ ಪಕ್ಷದ ನಿಷ್ಠಾವಂತರಿಗೆ ನೀಡಿದಂತಾಗುತ್ತದೆ.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಗೌಸ್ಖಾನ್ ಮಾತನಾಡಿ, ಅಲ್ಪಸಂಖ್ಯಾತರಿಗೆ ಗೌರವ ತರುವಲ್ಲಿ ಈಗಾಗಲೇ ಬೇಲೂರು ತಾಲೂಕಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವನ್ನು ಮುಸ್ಲಿಂ ಸಮಾಜಕ್ಕೆ ನೀಡಿದ್ದಾರೆ.
ಈ ಹಿಂದಿನಿಂದಲೂ ಪಕ್ಷಕ್ಕಾಗಿ ದುಡಿದಿರುವ ಪಟೇಲ್ ಶಿವಪ್ಪನವರಿಗೆ ಹುಡಾ ಸ್ಥಾನವನ್ನು ನೀಡುವ ಮೂಲಕ ಹಿರಿಯರಿಗೆ ಗೌರವ ನೀಡಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಬಿ.ಕೆ. ಮಹಬೂಬ್ ಪಾಷ ಮಾತನಾಡಿ ಜಿಲ್ಲಾ ವಕ್ಫ್ ಬೋರ್ಡ್ ಸ್ಥಾನವನ್ನು ಈ ಬಾರಿ ಅರಸೀಕೆರೆ ತಾಲೂಕಿಗೆ ನೀಡಬೇಕು. ಈ ಹಿಂದಿನಿಂದಲೂ ಇಲ್ಲಿ ಮುಸ್ಲಿಂ ಸಮಾಜ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯುತ್ತ ಬಂದಿದೆ. ಈ ನಿಟ್ಟಿನಲ್ಲಿ ಸಂಸದರು, ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರು ಸಹಕರಿಸುವಂತೆ ಹೇಳಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ಅಹಮ್ಮದ್, ಗ್ಯಾರಂಟಿ ಯೋಜನೆ ಸದಸ್ಯ ಸಿರಜ್ ಅಲಿ ಬೇಗ್ ಉಪಸ್ಥಿತರಿದ್ದರು.