ಅರಸೀಕೆರೆ:ದಿ:05.06.2025 ರಂದು ಹಾಸನ ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಇವರ ನೇತೃತ್ವದಲ್ಲಿ ಅರಸೀಕೆರೆ ತಾಲ್ಲೂಕು ಕಾರ್ಯ ವ್ಯಾಪ್ತಿಯಲ್ಲಿನ ಬಾಣಾವರ ಹಾಗೂ ಅರಕೆರೆಯ ಸುತ್ತಮುತ್ತಲಿನ ಜಲ್ಲಿ ಕ್ರಷರ್ ಗಳಲ್ಲಿ ಅಂತರ್ ರಾಜ್ಯ ವಲಸೆ ಕಾರ್ಮಿಕ ಕಾಯ್ದೆ ಹಾಗೂ ಇತರೆ ಕಾಯ್ದೆಗಳಡಿಯಲ್ಲಿ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಶಿವಸ್ವಾಮಿ, ತಾಲೂಕು ಕಾರ್ಮಿಕ ಇಲಾಖೆ ನಿರೀಕ್ಷಕರಾದ ಶಶಿಕಲಾ, ಬಾಣಾವರ ಪೊಲೀಸ್ ಠಾಣೆ ಹಾಗೂ ಜಾವಗಲ್ ಪೋಲಿಸ್ ಠಾಣೆಯ ಅಧಿಕಾರಿಗಳು ಹಾಜರಿದ್ದರು. ತಪಾಸಣೆಯ ಸಂದರ್ಭದಲ್ಲಿ ಕಂಡು ಬಂದ ಅಂತರ್ ರಾಜ್ಯ ವಲಸೆ ಕಾರ್ಮಿಕರುಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ಅಂತರ್ ರಾಜ್ಯ ಕಾರ್ಮಿಕರನ್ನು ನೇಮಿಸಿಕೊಂಡಿರುವ ಮಾಲೀಕರುಗಳಿಗೆ ಕಾರ್ಮಿಕರಿಗೆ ಸಂಬಂಧಿಸಿದ ದಾಖಲೆಗಳನ್ನು ಕಾರ್ಮಿಕ ಇಲಾಖೆ ಹಾಗೂ ಸಂಬಂಧ ಪಟ್ಟ ಪೊಲೀಸ್ ಇಲಾಖೆಗೆ ಸಲ್ಲಿಸಿ ತುರ್ತಾಗಿ ಮಾಹಿತಿಗಳನ್ನು ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಸೂಚನೆ ನೀಡಿದರು.